ನವದೆಹಲಿ: ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್ಗೆ ನೀಡಿದ ಮಧ್ಯಂತರ ವರದಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್ ಬಿ.ವಿ ಮತ್ತು ಬಿಜೆಪಿಯ ಗೌತಮ್ ಗಂಭೀರ್ ಅವರಿಗೆ ಕ್ಲೀನ್ ಚಿಟ್ ನೀಡಿ “ಅವರು ನಿಜವಾಗಿಯೂ ಯಾವುದೇ ಹಣವನ್ನು ವಿಧಿಸದೆ ಔಷಧಿ ಮತ್ತು ಆಮ್ಲಜನಕ ನೀಡುವ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
COVID-19 ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಅವರು ನೀಡುತ್ತಿರುವ ಸಹಾಯದ ಬಗ್ಗೆ ಅನುಮಾನ ವ್ಯಕ್ತ ಪಡಿಸಿ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಅವರನ್ನು ದೆಹಲಿ ಪೊಲೀಸರ ಅಪರಾಧ ಶಾಖೆ ಪ್ರಶ್ನಿಸಿದ ನಂತರ ಇದು ಸಂಭವಿಸಿದೆ.
ಶ್ರೀನಿವಾಸ್ ಬಿ.ವಿ ಕರ್ನಾಟಕ ಮೂಲದ ರಾಜಕಾರಣಿ. ಪ್ರಸ್ತುತ ಅವರು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿಯಾಗಿರುವ ಬಿವಿ ಶ್ರೀನಿವಾಸ್, ದೆಹಲಿಯಲ್ಲಿ ಕೋವಿಡ್ ಸಮಯದಲ್ಲಿ ಹಲವಾರು ಜನರಿಗೆ ಸಹಾಯ ಮಾಡಿದ್ದರು.
“ಪೊಲೀಸರು ಇಂದು ಬೆಳಿಗ್ಗೆ ನನ್ನನ್ನು ಕರೆದು ಬೆಳಿಗ್ಗೆ 11.45 ರ ಸುಮಾರಿಗೆ ನನ್ನ ಕಚೇರಿಗೆ ಬಂದರು. ನೀವು ಜನರಿಗೆ ಹೇಗೆ ಸಹಾಯ ಮಾಡುತ್ತಿದ್ದೀರಿ? ಎಂದು ಅವರು ಪ್ರಶ್ನಿಸಿದರು” ಎಂದು ಅವರು ಐಎಎನ್ಎಸ್ಗೆ ತಿಳಿಸಿದರು. ಶ್ರೀನಿವಾಸರನ್ನು ಪ್ರಶ್ನಿಸಿದ ಪೋಲಿಸರು, ಅವರು ನಿಜವಾಗಲೂ ಜನರಿಗೆ ಸಹಾಯ ಮಾಡಿರುವುದನ್ನು ಕಂಡು ಅವರಿಗೆ ಕ್ಲೀನ್ ಚಿಟ್ ನೀಡಿದರು.
ಆದರೆ ಬಿವಿ ಶ್ರೀನಿವಾಸ ಅವರನ್ನು ಪ್ರಶ್ನಿಸುವುದನ್ನು ಸಮರ್ಥಿಸಿಕೊಂಡ ದೆಹಲಿ ಪೊಲೀಸರು, ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಇದನ್ನು ಮಾಡಲಾಗಿದೆ ಎಂದು ಹೇಳಿದರು. ದೆಹಲಿ ಹೈಕೋರ್ಟ್, ದೆಹಲಿಯಲ್ಲಿ ಸರ್ಕಾರವೇ ಜನರಿಗೆ ಸಹಾಯ ಮಾಡಲು ಸಾಧ್ಯವಾಗದೇ ಇರುವಾಗ, ಶ್ರೀನಿವಾಸ್ ಹೇಗೆ ಸಹಾಯ ಮಾಡಿದ್ದರು ಎಂದು ಅನುಮಾನಿಸಿ ತನಿಖೆಗೆ ಆದೇಶ ನೀಡಿತ್ತು.
ಕೋವಿಡ್-19 ಔಷಧಿಗಳು ಮತ್ತು ಇತರ ವಸ್ತುಗಳ ವಿತರಣೆಯಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ನಗರ ಪೊಲೀಸರಿಗೆ ನಿರ್ದೇಶನ ನೀಡಿತ್ತು ಮತ್ತು ಯಾವುದೇ ಅಪರಾಧ ಎಸಗಿರುವುದು ಕಂಡು ಬಂದಲ್ಲಿ ಎಫ್ಐಆರ್ ದಾಖಲಿಸಲು ಕ್ರಮ ಕೈಗೊಳ್ಳಬೇಕೆಂದು ಪಿಟಿಐ ವರದಿ ಮಾಡಿದೆ.